ರಾಮಮಂದಿರ ಕಟ್ಟಿದ ಅಧಿಕಾರಿ ಪುತ್ರನಿಗೂ ಬಿಜೆಪಿ ಭದ್ರಕೋಟೆಯಲ್ಲಿ ಸೋಲು

ಉ.ಪ್ರದೇಶ: ರಾಮಮಂದಿರ ಇರುವ ಯುಪಿಯಲ್ಲಿ ಬಿಜೆಪಿ ಭಾರಿ ಹಿನ್ನಡೆ ಅನುಭವಿಸಿದ್ದಲ್ಲದೆ, ಆಯೋಧ್ಯೆಯಲ್ಲಿಯೇ ಸೋಲು ಕಂಡಿದ್ದು ಬಿಜೆಪಿಗೆ ಭಾರೀ ಮುಖಭಂಗ ಎನ್ನಲಾಗುತ್ತಿದೆ. ಆದರೆ ಇಷ್ಟಕ್ಕೆ ಈ ಸೋಲು ನಿಂತಿಲ್ಲ. ರಾಮ ಮಂದಿರದ ನಿರ್ಮಾಣದ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡ ಅಧಿಕಾರಿ ಪುತ್ರನಿಗೂ ಉತ್ತರ ಪ್ರದೇಶದ ಜನತೆ ಸೋಲುಣಿಸಿದ್ದಾರೆ.

ರಾಮ ಮಂದಿರ ನಿರ್ಮಾಣದಲ್ಲಿ ನಕ್ಷೆ, ವಿಜ್ಞಾನಿಗಳ ಸೂಚನೆ, ಎಂಜಿನೀಯರ್, ಕಾರ್ಮಿಕರು, ತಂತ್ರಜ್ಞರು ಎಲ್ಲರನ್ನೂ ಒಗ್ಗೂಡಿಸಿ ಭವ್ಯ ರಾಮ ಮಂದಿರ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡವರು ಬ್ಯೂರೋಕ್ರಾಟ್ ನೃಪೇಂದ್ರ ಮಿಶ್ರಾ. ಈ ಜವಾಬ್ದಾರಿಯನ್ನು ಅವರು ಅಚ್ಚುಕಟ್ಟಾಗಿ ಪೂರ್ಣಗೊಳಿಸಿದ್ದಾರೆ. ಅವರ ಪುತ್ರ ಸಾಕೇತ್ ಮಿಶ್ರಾ ಆಯೋಧ್ಯೆ ರಾಮ ಮಂದಿರದಿಂದ ಕೇವಲ 100 ಕಿ.ಮಿ ದೂರದಲ್ಲಿರುವ ಶ್ರಾವಷ್ಠಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.

ಆದರೆ ಸಾಕೇತ್ ಮಿಶ್ರಾ ಸಮಾಜವಾದಿ ಪಾರ್ಟಿ ನಾಯಕ ರಾಮ್ ಶಿರೋಮಣಿ ವರ್ಮಾ ಎದುರು ಪರಾಜಯ ಹೊಂದಿದ್ದಾರೆ. ರಾಮ್ ಶಿರೋಮಣಿ ವರ್ಮಾ 511055 ಮತಗಳನ್ನು ಪಡೆದರೆ, ಸಾಕೇತ್ ಮಿಶ್ರಾ 434382 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ರಾಮ್ ಶಿರೋಮಣಿ 76673 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

ಶ್ರಾವಷ್ಠಿ ಕ್ಷೇತ್ರ ಬಿಜೆಪಿ ಮುತ್ಸದ್ದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕರ್ಮ ಭೂಮಿಯಾಗಿದೆ. ಬಿಜೆಪಿಯ ಭದ್ರಕೋಟೆಯಾಗಿದ್ದ ಶ್ರಾವಷ್ಠಿ ಇದೀಗ ಸಮಾಜವಾದಿ ಪಾರ್ಟಿ ಕೈಸೇರಿದೆ. ಇತ್ತ ಆಯೋಧ್ಯೆ ರಾಮ ಮಂದಿರ ಹೊಂದಿರುವ ಫೈಜಾಬಾದ್ ಕ್ಷೇತ್ರದಲ್ಲೂ ಬಿಜೆಪಿ ಸೋಲು ಕಂಡರೆ, ಶ್ರಾವಷ್ಠಿಯಲ್ಲೂ ಬಿಜೆಪಿ ಮುಗ್ಗರಿಸಿದಂತಾಗಿದೆ.
ನವೀನ ಹಳೆಯದು
WhatsApp Join our 'Shan Media News' WhatsApp group - Join Now ×