ಕಾರವಾರ : ಹಳಿಯಾಳ ತಾಲೂಕಿನ ವಿವಿದೆಡೆ ಸುರಿದ ವಿಪರೀತ ಗಾಳಿ ಮಳೆಯಿಂದಾಗಿ ಮನೆಗಳ ಮೇಲ್ಚಾವಣಿ ಹಾನಿಯಾದ ಘಟನೆ ಹಳಿಯಾಳ ತಾಲೂಕಿನ ಚಿಬ್ಬಲಗೇರಿ ಗ್ರಾಮದಲ್ಲಿ ಜರುಗಿವೆ.
ಹಳಿಯಾಳ ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ ಶನಿವಾರ ಮಧ್ಯಾಹ್ನ ಹಾಗೂ ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಧರಿಗೆ ಉರುಳಿದ್ದು ಸಾರ್ವಜನಿಕರ ಜೀವನಕ್ಕೆ ತೊಂದರೆ ಉಂಟಾಗಿತ್ತು. ರವಿವಾರ ಹಗಲು ವಿದ್ಯುತ್ ಕಂಬ ,ಬಿದ್ದ ತಂತಿ ಸರಿಪಡಿಸುವ ಕಾರ್ಯ ನಡೆಯಿತು
ಅಲ್ಲದೆ ತಾಲೂಕಿನ ಚಿಬ್ಬಲಗೇರಿ ಗ್ರಾಮ ಒಂದರಲ್ಲಿ ಸುಮಾರು 30 ಮನೆಗಳ ಮೇಲ್ಚಾವಣಿ ಮಳೆಯಿಂದ ದುರಸ್ತಿಗೀಡಾಗಿವೆ. ಗ್ರಾಮದ ಶಿವಾಜಿ ಬಾಳೆಕುಂದ್ರಿ ಹಾಗೂ ಶಿವಾಜಿ ಸುಳಗೇಕರ್ ಎಂಬುವರ ಮನೆಯ ಮೇಲೆ ಹೊದಿಸಿದ್ದ ತಗಡಿನ ಶೀಟುಗಳು ಗಾಳಿಯ ರಭಸಕ್ಕೆ ಹಾರಿ ಹೋಗಿ, ಗ್ರಾಮದ 30 ಮನೆಗಳ ಮೇಲ್ಚಾವಣಿಯನ್ನು ದುರಸ್ತಿಗೀಡು ಮಾಡಿವೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಗ್ರಾಮದ ಮಹಾದೇವ ಸುಳಗೇಕರ, ಲಕ್ಷ್ಮಿ ಸುಳಗೇಕರ, ದೇಮಕ್ಕಾ ಸುಳಗೇಕರ, ವಿಮಲಾ ರಾವುತ, ಲಕ್ಷ್ಮಿ ರಾವುತ, ಲಕ್ಷ್ಮಿ ಹಳಿಯಾಳ್ಕರ, ಭಾರತಿ ಕಮ್ಮಾರ, ಅನುಸೂಯ ಗೌಡ ಸೇರಿದಂತೆ ಇನ್ನೂ ಹಲವು ಮನೆಗಳ ಮೇಲ್ಚಾವಣಿ ಜಖಂಗೊಂಡಿವೆ.
ಘಟನಾಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಅವರು ಭೇಟಿ ನೀಡಿ ಪರಿಶೀಲಿಸಿ ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ಹಾನಿಗೀಡಾದ ಸಂತ್ರಸ್ತರು ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.
.jpeg)