ವಯನಾಡ್ (ಕೇರಳ): ಕೇರಳದ ವಯನಾಡ್ನಲ್ಲಿ (Wayanad) ಸಂಭವಿಸಿದ ಭೀಕರ ಭೂಕುಸಿತ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಸದ್ದು ಮಾಡಿತ್ತು. ಈ ದುರಂತದಲ್ಲಿ 350ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇನ್ನೂ ನೂರಾರು ಮಂದಿಯ ಕುರುಹು ಪತ್ತೆಯಾಗಿಲ್ಲ. ದೇಶಾದ್ಯಂತ ಕೋಟ್ಯಂತರ ಮಂದಿ ಭಯಾನಕ ದುರಂತಕ್ಕೆ ಕಂಬನಿ ಮಿಡಿದಿದ್ದಾರೆ. ಮೂಲೆ ಮೂಲೆಯಿಂದ ಕೇರಳದ (Kerala) ಸಂತ್ರಸ್ತರಿಗೆ ಸಹಾಯಹಸ್ತ ಚಾಚಿ ಬರುತ್ತಿದೆ. ಈ ಎಲ್ಲದರ ಬೆನ್ನಲ್ಲೇ ಇದೀಗ ವಯನಾಡ್ನಲ್ಲೇ ನಿಗೂಢ ಶಬ್ಧವೊಂದು ಕೇಳಿಸಿದೆ. ಇದರಿಂದ ಮತ್ತೆ ಭೂಕಂಪ (Earthquake) ಸಂಭವಿಸಬಹುದೆಂದು ಸ್ಥಳೀಯರು ಭಯಬೀತರಾಗಿದ್ದಾರೆ.
ಇತ್ತೀಚೆಗೆ ಭೂಕುಸಿತ ಸಂಭವಿಸಿದ ಚೂರಲ್ಮಲಾ - ಮುಂಡಕ್ಕೈ ಪ್ರದೇಶಗಳಿಂದ ಸುಮಾರು 15 ರಿಂದ 20 ಕಿಲೋಮೀಟರ್ ದೂರದಲ್ಲಿರುವ ಅಂಬಲವಾಯಲ್-ಎಡಕಲ್ ಪ್ರದೇಶಗಳಿಂದ ಇಂದು ಬೆಳಿಗ್ಗೆ 10.15 ರ ಸುಮಾರಿಗೆ ನಿಗೂಢವಾಗಿ ಶಬ್ಧವೊಂದು ಕೇಳಿಸಿದೆ. ಅಷ್ಟೇ ಅಲ್ಲದೆ ಪಕ್ಕದ ಕೋಝಿಕ್ಕೋಡ್ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಕೆಲ ಭಾಗಗಳಲ್ಲೂ ಇದೇ ರೀತಿಯ ಶಬ್ದಗಳು ಕೇಳಿಬಂದಿವೆ ಎಂದು ವರದಿಯಾಗಿದೆ.
ನಿಜವಾಗ್ಲೂ ಭೂಕಂಪನ ಸಂಭವಿಸಿದ್ಯಾ?
ಇನ್ನು ವಯನಾಡ್ನಲ್ಲಿ ಸಂಭವಿಸಿದ ಈ ನಿಗೂಢ ಶಬ್ಧ, ಬರೀ ಶಬ್ಧವಷ್ಟೇ ಭೂಕಂಪವಲ್ಲ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ. ಇನ್ನು ಈ ನಿಗೂಢ ಶಬ್ಧ ಕೇಳಿದ ಸ್ಥಳಗಳಲ್ಲಿ ಈಗಾಗಲೇ ತನಿಖೆ ನಡೆಸಲಾಗುತ್ತಿದೆ. ಅದೇ ರೀತಿ ಭೂಕುಸಿತದ ತೀವ್ರತೆಯನ್ನು, ಭೂಕಂಪನದ ಬಗ್ಗೆ ಮೌಲ್ಯಮಾಪನ ಮಾಡಲು ಕೇಂದ್ರದ ತಜ್ಞರ ತಂಡವು ಈಗಾಗಲೇ ವಯನಾಡ್ ಪ್ರದೇಶಕ್ಕೆ ಭೇಟಿ ನೀಡಿದೆ.
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಭೂಕಂಪನ ನಡೆದಿದೆಯೇ ಎಂದು ಕಂಡುಹಿಡಿಯಲು ಪರಿಶೀಲನೇ ನಡೆಸುತ್ತಿದೆಯಂತೆ. ಸದ್ಯದ ಮಟ್ಟಿಗೆ “ಯಾವುದೇ ಭೂಕಂಪನದ ಸೂಚನೆಗಳನ್ನು ತೋರಿಸುವುದಿಲ್ಲ” ಎಂದು ಅಧಿಕಾರಿಗಳು ಹೇಳಿದ್ದಾರೆ.
ವಯನಾಡ್ನಿಂದ ಹೊರಟ ಭಾರತೀಯ ಸೇನೆಗೆ ಕಣ್ಣೀರಿನ ಬೀಳ್ಕೊಡುಗೆ
ಪ್ರಕೃತಿಯ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ವಯನಾಡ್ ಭಯಾನಕ ಭೂಕುಸಿತದಿಂದ ಸ್ಮಶಾನದಂತೆ ಆಗಿತ್ತು. ನೂರಾರು ಜೀವಗಳು ಮಣ್ಣಿನಡಿ ಸಿಲುಕಿ ಪ್ರಾಣ ಬಿಟ್ಟಿದ್ದರು. ಇನ್ನೂ ಕೆಲವರು ಕೈಯಲ್ಲಿ ಜೀವ ಹಿಡಿದು ದೇವರಾದರೂ ಬಂದು ನಮ್ಮನ್ನು ಉಳಿಸಲಿ ಎಂದು ಪ್ರಾರ್ಥಿಸಿದ್ದರು. ಆದರೆ ದೇವರ ರೂಪದಲ್ಲಿ ಬಂದವರು ಭಾರತೀಯ ಸೇನೆಯ ಹೆಮ್ಮೆಯ ಯೋಧರು. ಭೂಕುಸಿತ ಸಂಭವಿಸಿದ ದಿನದಿಂದ ಇಂದಿನವರೆಗೆ 10 ದಿನಗಳ ಕಾಲ ಯೋಧರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಇಂದು ವಯನಾಡಿನಿಂದ ಹೊರಟ್ಟಿದ್ದ ಯೋಧರಿಗೆ ಜನರಿಂದ ಭಾವನಾತ್ಮಕ ಬಿಳ್ಕೊಡುಗೆ ಸಿಕ್ಕಿತು
ಸಾಲಾಗಿ ಹೊರಟ ಯೋಧರ ಬದಿಗಳಲ್ಲಿ ನಿಂತು ಚಪ್ಪಾಳೆಯ ಮೂಲಕ ಜನ ಧನ್ಯವಾದ ತಿಳಿಸಿದರು. ಯೋಧರ ಮೊಗದಲ್ಲೂ ಧನ್ಯತಾ ಭಾವವಿತ್ತು. ಕೆಲವರಂತೂ ಕಣ್ಣೀರಾಕಿ, ಕೈ ಮುಗಿದು ಯೋಧರಿಗೆ ವಿದಾಯ ಹೇಳಿದರು. ವಯನಾಡ್ ಜಿಲ್ಲಾಡಳಿತವು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯ ಭಾಗವಾಗಿದ್ದ ಭಾರತೀಯ ಸೇನಾ ಸಿಬ್ಬಂದಿಗೆ ಬೀಳ್ಕೊಡುಗೆಯನ್ನು ಆಯೋಜಿಸಿತ್ತು. ಜನರು ಬೀಳ್ಕೊಡುತ್ತಿರುವ ವೀಡಿಯೊವನ್ನು PRO ಹಂಚಿಕೊಂಡಿದ್ದಾರೆ.
ಭಾವನಾತ್ಮಕ ಬೀಳ್ಕೊಡುಗೆ
ವಯನಾಡ್ನಲ್ಲಿ ಭಾರತೀಯ ಸೇನಾ ಸಿಬ್ಬಂದಿಗೆ ವಿದಾಯ ಹೇಳಲು ಜನರು ಒಗ್ಗೂಡಿದರು. ಇತರರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಸೈನಿಕರಿಗೆ ಸ್ಥಳೀಯ ಸಮುದಾಯ ಮತ್ತು ಹೊರಗಿನವರು ಕೃತಜ್ಞತೆ ಸಲ್ಲಿಸಿದರು. ಸೈನಿಕರು ಪ್ರದರ್ಶಿಸಿದ ಶೌರ್ಯ ಮತ್ತು ನಿಸ್ವಾರ್ಥತೆಗೆ ಕೊಚ್ಚಿ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಭೂಕುಸಿತ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಎಲ್ಲವನ್ನೂ ಪಣಕ್ಕಿಟ್ಟ ನಮ್ಮನ್ನು ರಕ್ಷಿಸಿದ ವೀರರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ…ನಿಮ್ಮ ಧೈರ್ಯ ಮತ್ತು ತ್ಯಾಗವನ್ನು ಮರೆಯಲಾಗುವುದಿಲ್ಲ" ಎಂದು PRO ಹೇಳಿದರು.
