ಇತ್ತೀಚಿಗೆ ಉಳ್ಳಾಲ ನಗರಸಭಾ ವ್ಯಾಪ್ತಿಗೊಳಪಟ್ಟ ಮೇಲಂಗಡಿ ವಾರ್ಡ್'ನಲ್ಲಿ ಭೀಕರ ಮಳೆಗೆ ಬೀಫಾತುಮ್ಮ ಅವರ ಮನೆ ಕುಸಿದಿದ್ದು, ಗಾಯಗೊಂಡ ಇಬ್ಬರ ಚಿಕಿತ್ಸೆಗೆ ಎಸ್ಡಿಪಿಐ ಉಳ್ಳಾಲ ನಗರ ಸಮಿತಿ ನೆರವಾಗಿದೆ.
ಉಳ್ಳಾಲ ನಗರಸಭಾ ವ್ಯಾಪ್ತಿಯ ಮೇಲಂಗಡಿ ವಾರ್ಡ್'ನಲ್ಲಿ ಇತ್ತೀಚಿನ ಭೀಕರ ಮಳೆಗೆ ವಯೋವೃದ್ಧೆ ಬೀಫಾತುಮ್ಮ ಅವರ ಮನೆ ಕುಸಿದಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಬೀಫಾತುಮ್ಮ ಅವರ ಮಗ ಮತ್ತು ಮೊಮ್ಮಗಳು ಗಾಯಗೊಂಡ ಹಿನ್ನೆಲೆಯಲ್ಲಿ ಉಳ್ಳಾಲದ ಸಹಾರ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಚಿಕಿತ್ಸೆಗೆ ಎಸ್ಡಿಪಿಐ ಉಳ್ಳಾಲ ನಗರ ಸಮಿತಿ ಮತ್ತು ಸ್ಥಳೀಯ ಕೌನ್ಸಿಲರ್ ನೆರವಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸಕ್ತ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ನಗರಸಭೆಯ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿಯಿದ್ದರೂ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂಬ ದೂರು ಕೇಳಿಬರುತ್ತಿದೆ.
ಈ ಮಧ್ಯೆ ಮನೆ ಕುಸಿಯುವ ಕುರಿತು ಸ್ಥಳೀಯ ಕೌನ್ಸಿಲರ್ ಕಮರುನ್ನೀಸ ನಿಝಾಮ್ ಅವರು ಜುಲೈ 16ರಂದು ಲಿಖಿತದ ಮೂಲಕ ಪೌರಾಯುಕ್ತೆ ವಾಣಿ ಅವರಿಗೆ ಮನವಿ ಸಲ್ಲಿಸಿ, ಎಚ್ಚರಿಸಿದ್ದರು. ಇದನ್ನು ಪೌರಾಯುಕ್ತೆ ಕಡೆಗಣಿಸಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೇ ಗಾಯಗೊಂಡ ಸಂತ್ರಸ್ತರ ಮನೆಗೆ ಪೌರಾಯುಕ್ತೆ ಮತ್ತು ಉಳ್ಳಾಲ ಶಾಸಕರು ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
