ಬೆಂಗಳೂರು: ಮೇ 17ರಿಂದ 22ರವರೆಗಿನ ಅವಧಿಯಲ್ಲಿ ಬೆಂಗಳೂರು, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು ಇದು ದಿಢೀರ್ ಪ್ರವಾಹ ಭೀತಿ ಸೃಷ್ಟಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಮೇ17 ರಿಂದ 22ರವರೆಗೆ ಅತೀವ ಎಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಸೂಚಿಸಿದೆ. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಂತರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ತಮಿಳುನಾಡಿಗೆ ರೆಡ್ ಅಲರ್ಡ್ ನೀಡಿರುವ ಹವಾಮಾನ ಇಲಾಖೆ, ಇದರ ಪರಿಣಾಮ ಬೆಂಗಳೂರಿನಲ್ಲೂ ಗೋಚರಿಸಲಿದೆ ಎಂದು ಎಚ್ಚರಿಸಿದೆ. ಮೇ 17ರಿಂದ 22ರವರೆಗೆ ಬೆಂಗಳೂರಿನಲ್ಲಿ ಮಳೆ ಸಂಭವ ಹೆಚ್ಚಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತವಾರಣವಿರಲಿದೆ. ಮಧ್ಯಾಹ್ನದ ಬಳಿಕ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಗುಡುಗು ಮಿಂಚು ಸಹಿತ ಮಳೆ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ. ಒಂದು ವಾರದಲ್ಲಿ ಭಾರೀ ಮಳೆ ಸಂಭವ ಹೆಚ್ಚಿರುವ ಕಾರಣ ಬೆಂಗಳೂರು ನಗರದಲ್ಲಿ ಚರಂಡಿಗಳು ತುಂಬಿ ಹರಿಯಲಿವೆ. ಇದು ಮತ್ತಷ್ಟು ಅನಾಹುತಕ್ಕೆ ಕಾರಣವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ತಮಿಳುನಾಡಿಗೆ ರೆಡ್ ಅಲರ್ಟ್ ನೀಡಿರುವ ಹವಾಮಾನ ಇಲಾಖೆ ಮೇ 18ರಿಂದ ಆರೆಂಜ್ ಅಲರ್ಟ್ ನೀಡಿದೆ. ಕೇರಳದಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ ಆರಂಭದಲ್ಲಿ ಮುಂಗಾರು ಕರ್ನಾಟಕ ಪ್ರವೇಶಿಸಲಿದೆ. ಈ ಬಾರಿ ಆರಂಭದಲ್ಲೇ ನಿರೀಕ್ಷೆಗೂ ಮೀರಿ ಸುರಿಯುವ ಮಳೆಯಿಂದ ಅಪಾಯದ ಸಾಧ್ಯತೆಯನ್ನು ಹವಾಮಾನ ಇಲಾಖೆ ಎಚ್ಚರಿಸಿದೆ.